Saturday 14 May 2016

ನೂರು ಕದನಗಳ ಸಿಂಹ

ನೆಪೋಲಿಯನ್ ಬೊನಪಾರ್ಟೆ



   ನೆಪೋಲಿಯನ್ ಕಾರ್ಸಿಕಾ ದ್ವೀಪದ ಅಜಾಶಿಯೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು. ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ನೆಪೋಲೆಯೋನ್ ದಿ ಬೋನೋಪಾರ್ಟೆಎಂದು ಹೆಸರಿಟ್ಟಿದ್ದರು. ಇವನ ತಂದೆ ಕಾರ್ಲೋ ಬೊನಪಾರ್ಟೆ ಫ್ರೆಂಚ್ ರಾಜ ೧೬ ಲೂಯಿಸ್ನ ಅರಮನೆಯಲ್ಲಿ ಕಾರ್ಸಿಕಾ ದ್ವೀಪದ ಪ್ರತಿನಿಧಿಯಾಗಿದ್ದರು.
   1779 ರಲ್ಲಿ 9 ವರ್ಷದ ನೆಪೋಲಿಯನ್ ಸೈನ್ಯವನ್ನು ಸೇರಿದ. 1789ರ ಫ್ರೆಂಚ್ ಕ್ರಾಂತಿ ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು. 1793ರ "ಸೀಜ್ ಆಫ್ ಟೂಲನ್" ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು. ೫ ಅಕ್ಟೋಬರ್ 1795ರಲ್ಲಿ "13 ವೆಂಡೆಮಿಯರ್"ರಲ್ಲಿ ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.
  ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನರಲ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೂದಲಿಸುತ್ತಿದ್ದರು. ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ. ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಡಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ತೋರಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ. ಸಿಕ್ಕ ಈ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ.
   ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಗಣಿಸುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವದವನಲ್ಲದೇ ಆಗಾಗ ಹಸನ್ಮುಖಿಯಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ. 
   ಆಗ ಅವನು ನೇತೃತ್ವ ವಹಿಸಿಕೊಂಡಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು. ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು.
   ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಮೊದಲಾದ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು.
  ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು. ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
  ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – ಸೈನಿಕರೇ, ನಿಮ್ಮ ಹೊಟ್ಟೆ ಅರ್ಧ ಹಸಿದಿದೆ, ಸರ್ಕಾರ ನಿಮಗೆ ಸಾಕಷ್ಟು ಅನುಕೂಲಗಳನ್ನು ಇನ್ನೂ ಮಾಡಿಕೊಡಬೇಕಿದೆ, ಆದರೆ ಅದಕ್ಕೆ ಏನೂ ಮಾಡಲಾಗುತ್ತಿಲ್ಲ. ನಿಮ್ಮ ತಾಳ್ಮೆ ಧೈರ್ಯ ನಿಮಗೆ ಗೌರವ ನೀಡುತ್ತಿದೆ. ಆದರೆ ಯಾವ ವೈಭವ ಅಥವಾ ಉಪಯೋಗ ಅದರಿಂದಾಗುವುದಿಲ್ಲ ್ಲ. ನಾನು ನಿಮ್ಮನ್ನು ಪ್ರಪಂಚದ ಸಂವೃದ್ಧ ಪ್ರದೇಶದ ಕಡೆಗೆ ಮುನ್ನಡೆಸುತ್ತೇನೆ.  ಅಲ್ಲಿ ನೀವು ಪ್ರವರ್ಧಮಾನಕ್ಕೆ ಬರುತ್ತಿರುವ ನರಗಳು, ಕಳೆದು ಹೋಗುತ್ತಿರುವ ಪ್ರಾಂತ್ಯಗಳನ್ನು ಕಾಣುವಿರಿ. ಅಲ್ಲಿ ನೀವು ಗೌರವ ಮತ್ತು ವೈಭವದ ಸಂಪತ್ತಿನ ಬೆಳೆಯನ್ನು ಕೊಯ್ಲು ಮಾಡಬಹುದು. ಇಟಲಿಯ ಸೈನ್ಯದ ಸೈನಿಕರೇ ಭದ್ರತೆ ಮತ್ತು ಧೈರ್ಯವನ್ನು ಬಯಸುವುದಾದರೆ ಬನ್ನಿ.
    ನೆಪೋಲಿಯನ್ನಿನ ಈ ಮಾತುಗಳಿಗೆ ಕೇವಲ ನೀರಸ ಪ್ರತಿಕ್ರಿಯೆ ಇರುತಿತ್ತು. ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – 
ನೀವು ನನ್ನಿಂದ ಪವಾಡವನ್ನು ನಿರೀಕ್ಷಿಸಿದ್ದೀರಿ, ಆದರೆ ನಾನದನ್ನು ಮಾಡಲಾಗುವುದಿಲ್ಲ. ವಿವೇಕ ಮತ್ತು ಮುಂದಾಲೋಚನೆಯೊಂದಿಗೆ ಮಹತ್ತರವಾದುದನ್ನು ಸಾಧಿಸಬಹುದು. ಆದರೆ ಅದು ಯಶಸ್ಸಿನಿಂದ ಪರಾಭವದ ಕಡೆಗಿನ ನಡೆಯಾಗುತ್ತದೆ. ವ್ಯಾವಹಾರಿಕ ಅನುಭವದ ಪರಿಮಾಣದಿಂದ ನಾನು ಅರಿತಿರುವುದೇನೆಂದರೆ ಅಂತ್ಯೋಪಾಯದ ಎಲ್ಲವೂ ಏಕರೂಪವಾಗಿ ಕೆಲಸಕ್ಕೆ ಬಾರದ ವಸ್ತುವಿನ ಕಡೆ ತಿರುಗುತ್ತದೆ.
    ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ. ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ. ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60,000 ಬಲದ ಸೇನೆ. ಅದರಲ್ಲಿ 25,000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35,000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . 
    ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ.
   ನೆಪೋಲಿಯನ್ ಮತ್ತೆ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ. ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು. ಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿನಂದಿಸಿದ.
  ನೆಪೋಲಿಯನ್ನನ ಮಿಂಚಿನ ಆಕ್ರಮಣಕ್ಕೆ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು. ಅದ್ಯಾರೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳ್ಳೆಯದೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು. ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ಮತ್ತೂ ಇನ್ನೂ ಮುಂದೆ ತಲುಪಿದ. ಆಸ್ಟ್ರಿಯಾದ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .
   ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು. ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ. ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯ ತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ. ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು. 
  ಈ ಹೋರಾಟದ ನಡುವೆ ನಪೋಲಿಯನ್ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ. ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ. ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ. ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು. ಆಗಿನ್ನೂ ಅವನಿಗೆ ಕೇವಲ 28 ವಯಸ್ಸು, ಚಕ್ರವರ್ತಿಯೂ ಆಗಿರಲಿಲ್ಲ ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ.
   ಅಕ್ಟೋಬರ್ 1799ರಲ್ಲಿ ನೆಪೋಲಿಯನ್ ಯುದ್ಧಗಳ ಗೆಲುವಿನ ನಂತರ ಪ್ಯಾರಿಸ್ಗೆ ವಾಪಾಸ್ ಬಂದನು. ಆ ಸಮಯದಲ್ಲಿ ಪ್ರಾನ್ಸ್ನ ವ್ಯೆವಸ್ಥೆ ಸರಿಯಾಗಿರಲಿಲ್ಲ.  ಫ್ರೆಂಚ್ ಕ್ರಾಂತಿಯಾದ ಮೇಲೆ ಬಂದ ಜಾಕೊಬಿನ್ ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ಡೈರೆಕ್ಟರಿಗಳು ಜಗಳವಾಡುತ್ತಿದ್ದರು. ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು.
  2 ನೆ ಡಿಸಂಬರ್ 1804ರಲ್ಲಿ ಗ್ರಾಂಡ್ ಕೊರೋನೇಷನ್ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ ಪ್ರಾನ್ಸ್ ಚಕ್ರವರ್ತಿಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.
ಇಡೀ ಫ್ರಾನ್ಸ್ ದೇಶದಲ್ಲಿ ಇವನ ಆಳ್ವಿಕೆಯಲ್ಲಿ ಕಾನೂನು ಕೋಡ್ ಮಾಡಿದ್ದನು. ಇದೇ ನೆಪೋಲಿಯನಿಕ್ ಕೋಡ್. ಇದರಲ್ಲಿ ಸಮಾನತೆ, ಜಾತ್ಯಾತೀತ ಮುಂತಾದ ಸರ್ಕಾರವನ್ನು ರೂಪಿಸಿದ್ದನು. ಆದರೆ ಫ್ರೆಂಚ್ ಕ್ರಾಂತಿಯು ಮಹಿಳೆಯರಿಗೆ ತಂದು ಕೊಟ್ಟ ಹಕ್ಕುಗಳನ್ನು ನೆಪೋಲಿಯನ್ ತೆಗೆದುಹಾಕಿದನು.
1. ಧಾರ್ಮಿಕ ಸುಧಾರಣೆಗಳು-1801 ರಲ್ಲಿ ಕೊಂಕೋರ್ಡಟ್ನಲ್ಲಿ ಕತೋಲಿಕ್ ಗಳ ಜತೆ ಶಾಂತಿ ಮಾಡಿದನು.
2. ಆರ್ಥಿಕ ಸುಧಾರಣೆ-ಆರ್ಥಿಕತೆಯನ್ನು ಹೆಚ್ಚಿಸಲು ನೆಪೋಲಿಯನ್ ಹೊಸ ಕೈಗಾರಿಕಾ ಉದ್ಯಮವನ್ನು ಬೆಂಬಲಿಸಿದನು.
3. ಲೋಕೋಪಯೋಗಿ- ರಸ್ತೆಗಳನ್ನು ಹಾಗು ನೀರಿನ ಕೊಡ್ಲುಗಳನ್ನು ತಯಾರಿಸಿ ಜನರಿಗೆ ಸಹಾಯ ಮಾಡಿದನು. ಶಿಕ್ಷಣದಲ್ಲು ಸುಶಾರಣೆಯನ್ನು ತಂದ ಇವನು ಶಾಲೆಗಳನ್ನು ಸರ್ಕಾರದ ಕೆಳಗೆ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಬರುವಹಾಗೆ ಮಾಡಿದನು.ಹಾಗೆಯೆ ಇಡೀ ಫ್ರಾನ್ಸ್ನಲ್ಲಿ ಏಕಪ್ರಕಾರದ ಅಳತೆ ಸಾಧನವನ್ನು ತಂದನು.
4. ಯುದ್ಧ ಸುಧಾರಣೆ-ಯುದ್ಧ ತಂತ್ರಜ್ಞಾನ, ಸೇನಾ ನಡೆಸುವಿಕೆ ಹಾಗು ಆಯುಧ ವಿಜ್ಞಾನಕ್ಕೆ ಫ್ರಾನ್ಸ್ನಲ್ಲಿ ಇವನದ್ದೆ ಹೆಸರು.
ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಇದರಂತೆ 1805ರಲ್ಲಿ ಆಸ್ತರ್ಲಿಟ್ಜಿ ಯುದ್ಧದಲ್ಲಿ ಆಸ್ಟ್ರಿಯ ಮತ್ತು ರಷ್ಯಾ ಸೈನ್ಯಗಳನ್ನು ಸೋಲಿಸಿ, 1806ರಲ್ಲಿ ಜೇನ ಎಂಬ ಊರಿನಲ್ಲಿ ಪ್ರಷ್ಯಾ ಸೈನ್ಯವನ್ನು ಮುಳುಗಿಸಿದನು. ಅದೇ ವರ್ಷದಲ್ಲಿ ಡಚ್ ರಾಜ್ಯವನ್ನು ಗೆದ್ದು ಗ್ರಾಂಡ್ ಎಂಪೈರ್ ಸೃಷ್ಟಿಸಿದನು.
    ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು. ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ಕಂಡ ಇದರಿಂದಾಗಿ ಇವನನ್ನು ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾನ್ಸ್ಗೆವಾಪಸ್ ಬಂದನು. ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು.  ನೂರು ಕದನಗಳ ಸಿಂಹ ಎಂಬ ಹೆಸರನ್ನು ಪಡೆದ ತನ್ನ ಪ್ರಪಂಚ ಗೆಲ್ಲುವ ಕನಸಿಗೆ ತಡೆಗೋಡೆಯಾಗಿದ್ದು ವಾಟರ್ಲೂ ಕದನ. ಇವನು ಅನುಭವಿಸಿದ ಮತ್ತೊಮ್ಮೆ ಸೋಲಿನಿಂದಾಗಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡಲಾಗುತ್ತೆ. ಇದೇ ಅವನ ಕೊನೆಯ ಯುದ್ಧವಾಗಿತ್ತು.
ನೆಪೋಲಿಯನ್ ಇನ್ನೈದು ವರ್ಷಗಳನ್ನು ಹೆಲೆನ ದ್ವೀಪದಲ್ಲೆ ಕಳೆದನು. ಇವನ ಆರೊಗ್ಯ ಅಸ್ಥಿರವಾಗಿದ್ದು ಟ್ಯೂಬರ್ಕ್ಯುಲೋಸಿಸ್ ಹಾಗು ಲಿವರ್ ತೊಂದರೆಗಳು ಅಂಟಿತ್ತು. ಮೇ 5 1821ರಂದು ಹೊಟ್ಟೆಯ ಕಾನ್ಸರ್ದಿಂದಾಗಿ ನೆಪೋಲಿಯನ್ ವಿಧಿವಶನಾದನು. 
   ಆದರೆ ಇಂದಿಗೂ ಇವನ ಸಾವಿನ ಕಾರಣ ವಿವಾದಾಸ್ಪದವಾಗಿದ್ದು ನಿಗೂಡ ಎನಿಸುತ್ತದೆ.ಕೆಲವರು ನೆಪೋಲಿಯನ್ ಸತ್ತಿದ್ದು ಕಾನ್ಸರ್ದಿಂದಾಗಿ ಎಂದರೆ. ಕೆಲವರು ಅವನನ್ನು ಅರ್ಸೆನಿಕ್ ವಿಷದಿಂದ ಸಾಯಿಸಿದ್ದು ಎನ್ನುತ್ತಾರೆ. ಇಂದಿಗೂ ಫ್ರಾನ್ಸ್ ದೇಶ ನೆಪೋಲಿಯನ್ ದಿನಗಳ ಬಗ್ಗೆ ಹೆಮ್ಮೆ ಪಡುತ್ತದೆ. ಇವನ ನೆಪೋಲಿಯನಿಕ್ ಕೋಡ್ ಈಗಿನ ಫ್ರೆಂಚ್ ಸಂವಿಧಾನವನ್ನು ರೂಪಿಸುತ್ತದೆ. ಆಯುಧ ವಿಜ್ಞಾನ, ಸೇನಾ ನಡವಳಿಕೆ, ಯುದ್ಧ ತಂತ್ರಜ್ಞಾನ ಈಗಲು ಬಳಿಕೆಯಲ್ಲಿದೆ. ವಿಶ್ವದ ಅಡಿಯಲ್ಲಿ ನೆಪೋಲಿಯನ್ ತನ್ನ ನಡತೆಯಿಂದ ಜನರ ಮನಗಳನ್ನು ಗೆದ್ದು, ಅವರಲ್ಲಿ ಮಹತ್ತರ ಬದಲಾವಣೆಯ ಕಲ್ಪನೆಯನ್ನು ಹಾಕಿದನು. ನೆಪೋಲಿಯನ್ ಇಡೀ ವಿಶ್ವವನ್ನು ಗೆಲ್ಲಲಿಕ್ಕಾಗದಿದ್ದರು, ಯುರೋಪ್ ಜನರಲ್ಲಿ ದೇಶಭಕ್ತಿ ಮನೋಭಾವನೆಯನ್ನು ರೋಪಿಸಿದ್ದಾನೆ.
     1796ರಲ್ಲಿ ನೆಪೋಲಿಯನ್ ಜೋಸೆಫೈನ್ಳನ್ನು ಮದುವೆಯಾದನು. ಜೋಸೆಫೈನ್ ಗೆ ಮಕ್ಕಳಿಲ್ಲದ ಕಾರಣ ೧೮೧೦ರಲ್ಲಿ ಮೇರಿ ಲುಯಿಸಿಳನ್ನು ಮದುವೆಯಾದನು. ಇವರಿಬ್ಬರಿಗೆ ನೆಪೋಲಿಯನ್ ಚಾರ್ಲೆಸ್ ಎಂಬ ಮಗನು ಹುಟ್ಟಿದನು. ಅವನು ಮುಂದೆ ನೆಪೋಲಿಯನ್-೨ ಎಂದು ಪ್ರಸಿದ್ಧಿಯಾದನು.
     ನೆಪೋಲಿಯನ್ ಮತ್ತು ಕರುನಾಡಿಗೂ ನಂಟಿರುವುದನ್ನು ಕಾಣಬಹುದು. ನೆಪೋಲಿಯನ್ ಮತ್ತು ಮೈಸೂರಿನ ಹುಲಿ ಟಿಪ್ಪುಸುಲ್ತಾನನ ನಡುವೆ ಸ್ನೇಹ ವಿತ್ತು ಅನ್ನೋದು ಒಂದಂಶದಿಂದ ತಿಳಿದು ಬರುತ್ತೆ. ಬ್ರೀಟೀಷರನ್ನು ಹೊಡೆದೋಡಿಸಬೇಕು ಎಂಬ ದೃಡ ಸಂಕಲ್ಪ ಮಾಡಿದ್ದ ಟಿಪ್ಪು ನೆಪೋಲಿಯನ್ ನ್ನನ ಸಹಾಯ ಯಾಚಿಸಿದ್ದ. ವಿಧಿಯಾಟವೆಂಬಂತೆ ಆ ಸಮಯದಲ್ಲಿ ಫ್ರಾನ್ಸಿನ ಸೈನ್ಯ ಆತಂಕದಲ್ಲಿದ್ದ ಕಾರಣ ನೆಪೋಲಿಯನ್ ಬರುವೆನೆಂದು ಮಾತುಕೊಟ್ಟು ನಂತರ ನಿರಾಕರಿಸಿದ್ರು. ಇದು ನಡೆದ್ದು ಹದಿನೆಂಟನೆಯ ಶತಮಾನದಲ್ಲಿ ಬಹುಶಃ ಅಂದು ನೆಪೋಲಿಯನ್ ಟಿಪ್ಪುವಿಗೆ ಸಹಾಯ ಹಸ್ತ ಚಾಚಿದ್ರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಮೊದಲೇ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಮಂಜುನಾಥ್ ಹೆಚ್.ಆರ್
Mail : m


anjunathahr1991@gmail.com

No comments:

Post a Comment